FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Thursday 28 August 2014

2014ರ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಅಧ್ಯಾಪಕರು

ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಅಧ್ಯಾಪಕರಿಗೆ
;
ಶ್ರೀ ಶಂಕರನಾರಾಯಣ ಭಟ್.ಎಸ್, ಮುಖ್ಯ ಶಿಕ್ಷಕರು ನವಜೀವನ ಫ್ರೌಢ ಶಾಲೆ, ಪೆರಡಾಲ ಶ್ರೀ ಸೀತಾರಾಮ ಎಂ ಮುಖ್ಯ ಶಿಕ್ಷಕರು, ಸರಕಾರಿ ಕಿರಿಯ ಬುನಾದಿ ಶಾಲೆ, ಮಧೂರು

Wednesday 27 August 2014


-->
28-08-2018

ಕನ್ನಡ ಮಾಧ್ಯಮ ಶಾಲೆಗಳ ಬ್ಲೋಗ್ ಗಳಲ್ಲಿ ಕನ್ನಡ ಬಳಸಿ …..ಕನ್ನಡ ಉಳಿಸಿ,ಕನ್ನಡ ಅಧ್ಯಾಪಕ ಸಂಘ.

          ಒಲವಿನ ಕನ್ನಡ ಬಂಧುಗಳೇ, 
               ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಶಿಕ್ಷಣದಲ್ಲಿ ಪುರೋಗತಿ ಉಂಟಾಗುವುದಲ್ಲದೆ, ಅಧಿಕಾರಿ ವರ್ಗದವರಿಗೆ ತಮ್ಮ ಶಾಲೆಗಳ ಮಾಹಿತಿಗಳನ್ನು ಮತ್ತು ವ್ಯವಸ್ಥೆಯ ಕುರಿತಾದ ಸಮಗ್ರ ಚಿತ್ರಣವನ್ನು ನೀಡುವುದಕ್ಕೆ ಸುಲಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನಾಡಿನ ಸಂಸ್ಕೃತಿ, ಕಲೆ,ಸಾಹಿತ್ಯ ,ಪರಂಪರೆಯನ್ನು ಈ ಬ್ಲೋಗಿನ ಸಹಾಯದಿಂದ ಪರಿಚಯಯಿಸುವ ಅನೇಕ ಕಾರ್ಯಕ್ರಮಗಳು ಶಾಲೆಯಲ್ಲಿ ಔದ್ಯೋಗಿಕವಾಗಿ ನಡೆಯುತ್ತಿದೆ. ಇವೆಲ್ಲವನ್ನೂ ಪರಸ್ಪರ ವಿನಿಮಯ ಮಾಡುವ ಮಧ್ಯವರ್ತಿಯಾಗಿ ಈ ಬ್ಲೋಗ್ ಗಳು ಮೂಡಿಬರಬೇಕೆಂಬ ಸದುದ್ದೇಶದಿಂದ ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳು ಬ್ಲೋಗನ್ನು ಹೊಂದಬೇಕೆಂದು ಶಾಲೆಯ ಶಿಕ್ಷಕರಿಗೆ ಇಲಾಖೆಯ ವತಿಯಿಂದ ತರಬೇತಿಯನ್ನು ನೀಡುತ್ತಿದೆ. ಈ ತರಬೇತಿಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಂದ ಕನ್ನಡ ಅಧ್ಯಾಪಕರೂ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದು ತಮ್ಮ ಶಾಲೆಗಳ ಬ್ಲೋಗಗಳನ್ನು ಕನ್ನಡದಲ್ಲಿಯೂ ಅಲಂಕಾರಗೊಳಿಸಬೇಕಾದ ಅನಿವಾರ್ಯತೆಯಿದೆ.                                 ವಿದ್ಯುತ್ ಬಿಲ್ಲು ಟೆಲಿಫೋನ್ ಬಿಲ್ಲು , ಅನೇಕ ಅರ್ಜಿ ನಮೂನೆಗಳನ್ನು ಕನ್ನಡದಲ್ಲಿ ಬಯಸುವ ಸಾಮಾನ್ಯ ಕನ್ನಡಿಗರಿಗೆ ಇಂದು ಕೆಲವು ಕನ್ನಡ ಶಾಲೆಗಳ ಬ್ಲೋಗ್ ಗಳನ್ನು ನೋಡಿದರೆ ಆಘಾತವಾಗಬಹುದು.ಕನ್ನಡದ ನೆಲದಲ್ಲಿ ನೆಲೆನಿಂತಿದ್ದು ಕನ್ನಡ ಅಧ್ಯಾಪಕರಾದ ನಾವು ಈ ಸ್ಥಿತಿಗೆ ಅವಕಾಶ ಮಾಡಿಕೊಡಬಾರದು. ಕೇರಳ,ಕರ್ನಾಟಕ ಸಂಪರ್ಕವನ್ನು ಹೊಂದಿದ ಭವ್ಯ ಇತಿಹಾಸವಿರುವ ಮತ್ತು ಹಿಂದೊಮ್ಮೆ ಅಚ್ಚ ಕನ್ನಡ ಶಿಕ್ಷಣ ಸಂಸ್ಥೆಗಳೇ ಆಗಿದ್ದ ಕಾಸರಗೋಡಿನ ಎಲ್ಲಾ ಶಾಲೆಗಳ ಅಧಿಕೃತರು ಇದನ್ನು ಅರ್ಥೈಸಿಕೊಳ್ಳಬೇಕು. ಮಕ್ಕಳ ಬರಹಗಳಿಂದ ಹಿಡಿದು ಶಿಕ್ಷಕರ ಮಾದರಿ ಅಧ್ಯಾಪನವನ್ನೂ, ವಿವಿಧ ಶಾಲಾ ಚಟುವಟಿಕೆಗಳನ್ನೂ ಪರಸ್ಪರ ನೋಡಲು ಮತ್ತು ಅಧ್ಯಯನ ಮಾಡಲು ಸಾಧ್ಯತೆ ಕಲ್ಪಿಸುವ ಈ ವ್ಯವಸ್ಥೆಯಲ್ಲಿ ಕನ್ನಡ ಅಧ್ಯಾಪಕರು ಹಿಂದುಳಿಯಬಾರದು. ಅನ್ಯ ಭಾಷೆಗೆಗೆ ಪರಾಧೀನರಾಗದೆ ತಮ್ಮ ಶಾಲೆಗಳ ಅಧಿಕೃತ ಬ್ಲಾಗಿನಲ್ಲಿ ಕನ್ನಡದಲ್ಲಿಯೂ ವಿಚಾರಗಳನ್ನು ಪ್ರಕಟಿಸಬೇಕು. ಇದಕ್ಕೆ ಅಗತ್ಯವಾದ ತರಬೇತಿಗಳನ್ನು ಎಲ್ಲಾ ಕನ್ನಡ ಶಿಕ್ಷಕರಿಗೆ ಸಕಾಲದಲ್ಲಿ ನೀಡಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಅಧಿಕೃತರನ್ನು ಒತ್ತಾಯಿಸಿದೆ.                                         ನಿನ್ನೆ ನಡೆದ ಕಾಸರಗೋಡು ಶಿಕ್ಷಣ ಉಪನಿರ್ದೇಶಕರು ಕರೆದ ಅಂಗೀಕೃತ ಅದಧ್ಯಾಪಕರ ಸಂಘಗಳ ಸಭೆಯಲ್ಲಿ ಈ ವಿಚಾರವನ್ನು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಸ್ತಾಪಿಸಿದರು. ಈ ಹಿಂದೆ ಎಲ್ಲಾ ಕನ್ನಡ ಶಾಲೆಗಳಲ್ಲಿ ದಸರಾ ನಾಡಹಬ್ಬವು ವಿಜೃಂಬಣೆಯಿಂದ ನಡೆಯುತ್ತಿತ್ತು.ಈಗ ಸರಕಾರದ ಕೃಪಾಕಟಾಕ್ಷವಿಲ್ಲದೆ ಸೊರಗಿ ಹೋಗಿದೆ. ಆದರೆ ಕಾಸರಗೋಡಿನ ಕನ್ನಡ ಪರ ಸಂಘ ಸಂಸ್ಥೆಗಳ ನಿರಂತರ ಪ್ರಯತ್ನದ ಫಲವಾಗಿ ಜಿಲ್ಲೆಯ ಉಪನಿರ್ದೇಶಕರು ಎಲ್ಲಾ ಕನ್ನಡ ಶಾಲೆಗಳಲ್ಲಿ ಕನ್ನಡದ ಸಂಸ್ಕೃತಿಯ ಪ್ರತೀಕವಾದ ದಸರಾ ನಾಡಹಬ್ಬದ ಆಚರಣೆಯನ್ನು ಮಾಡಬೇಕೆಂದು ಸುತ್ತೋಲೆ ಹೊರಡಿಸಿದ್ದಾರೆ. ಕೇರಳ ರಾಜ್ಯದ ನಾಡಹಬ್ಬವಾದ ಓಣಂನ್ನು ವೈವಿಧ್ಯಮಯವಾಗಿ ಆಚರಿಸುವ ನಮಗೆ ದಸರಾ ನಾಡಹಬ್ಬದ ಆಚರಣೆಯು ಇನ್ನಷ್ಟು ಬಾಂಧವ್ಯವನ್ನು ಬೆಸೆಯುವಂತಾಗಲಿ. ಈ ಸುತ್ತೋಲೆಯನ್ನು ಹೊರಡಿಸಿದ ಅಧಿಕೃತರಿಗೆ ಅಭಿನಂದನೆಗಳು.    
                                             ಇತೀ  ವಿಶ್ವಾಸಗಳೊಂದಿಗೆ,
                                                                                               ಸುಬ್ರಹ್ಮಣ್ಯ ಭಟ್ ಕೆ.
                                                                                                          ಪ್ರಧಾನ ಕಾರ್ಯದರ್ಶಿ

Tuesday 26 August 2014

27-08-2024
ನೂತನವಾಗಿ ಪ್ಲಸ್ ವನ್ ತರಗತಿ  ಪ್ರಾರಂಭಿಸುತ್ತಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಿಗೆ ಮತ್ತು ಇದಕ್ಕೆ  ಅನುವುಮಾಡಿಕೊಟ್ಟ ಎಲ್ಲಾ ಅಧಿಕೃತರಿಗೂ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಅಭಿನಂದನೆಗಳು ಮತ್ತು ಹಾರ್ದಿಕ ಶುಭಾಶಯಗಳು.

 

ದಸರಾ ನಾಡಹಬ್ಬವನ್ನು ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ನವರಾತ್ರಿ ಸಮಯದಲ್ಲಿ ಒಂದು ದಿನ ಆಚರಿಸಬೇಕೆಂದು ಸುತ್ತೋಲೆ ಹೊರಡಿಸಿದ ಕಾಸರಗೋಡು ಶಿಕ್ಷಣ ಉಪನಿರ್ದೇಶಕರಿಗೆ ಕೇರಳ ಪ್ರಾಂತ್ಯ ಕನ್ನಡಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಅಭಿನಂದನೆಗಳು

ಸಿರಿಗನ್ನಡಂ ಗೆಲ್ಗೆ...................ಸಿರಿಗನ್ನಡಂ ಬಾಳ್ಗೆ.................

Sunday 24 August 2014

24-08-2014
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಕುಂಬಳೆ ಉಪಜಿಲ್ಲೆಯ ಮಹಾಸಭೆ.
ಕುಂಬಳೆ ಘಟಕದ ಮಹಾಸಭೆಯನ್ನು ಶ್ರೀ ರಾಜಗೋಪಾಲ ಪುಣಿಂಚತ್ತಾಯ ನಿವೃತ್ತ ಸಂಸ್ಕೃತಅಧ್ಯಾಪಕರು ಉದ್ಘಾಟಿಸಿದರು.

  ಕಾಸರಗೋಡು ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನವರತ ಹೋರಾಡುವ ಕನ್ನಡ ಅಧ್ಯಾಪಕ ಸಂಘದ ಪ್ರಯತ್ನಕ್ಕೆ ಸಮಾಜದ ಎಲ್ಲಾ ಕಡೆಯಿಂದಲೂ ಮನ್ನಣೆ ಸಿಗಲಿ
ಕಾಸರಗೋಡು ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನವರತ ಹೋರಾಡುವ ಕನ್ನಡ ಅಧ್ಯಾಪಕ ಸಂಘದ ಪ್ರಯತ್ನಕ್ಕೆ ಸಮಾಜದ ಎಲ್ಲಾ ಕಡೆಯಿಂದಲೂ ಮನ್ನಣೆ ಸಿಗಲಿ,ಎಲ್ಲಾ ಅಧ್ಯಾಪಕರೂ ಈ ಸಂಘಟನೆಗೆ ಬೆನ್ನೆಲುಬಾಗಿ ನಿಂತು ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ ಕಾಸರಗೋಡಿನ ಕನ್ನಡಿಗರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಾಣುವಂತಹ ಪ್ರಧಾನ ಸಂಘಟನೆಯಾಗಿ ಬೆಳಗುವಂತೆ ಮಾಡಿರಿ  ಎಂದು  ಶ್ರೀ ರಾಜಗೋಪಾಲ ಪುಣಿಂಚತ್ತಾಯ ನಿವೃತ್ತ ಸಂಸ್ಕೃತ ಅಧ್ಯಾಪಕರು ನುಡಿದರು ಅವರು ಜಿ.ವಿ.ಎಚ್.ಎಸ್.ಎಸ್.ನಲ್ಲಿ ಜರಗಿದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಮಹಾ ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು. ಮಹಾಸಭೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಾಜಾರಾಮ ಕೆ.ವಿ. ವಹಿಸಿದ್ದರು. ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಸದಾಶಿವ ನಾಯಕ್, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಕೆ.ವಿ.  ಸತ್ಯನಾರಾಯಣ ರಾವ್, ಮಹಾಲಿಂಗೇಶ್ವರ ಭಟ್ ಎಂ.ವಿ. , ಶಾಲಾ ಪ್ರಾಂಶುಪಾಲರಾದ ವಿಷ್ಣು ಭಟ್ ಮತ್ತ  ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಉಪಸ್ಥಿತರಿದ್ದರು.ಸಂಘಟನೆಯ ಕಾರ್ಯದರ್ಶಿ ಪುರುಷೋತ್ತಮ ಕುಲಾಲ್ ಸ್ವಾಗತಿಸಿಕೇಂದ್ರ ಸಮಿತಿ ಸದಸ್ಯರಾದ  ಗುರುಪ್ರಸಾದ್ ರೈ ವಂದಿಸಿದರು ಖಜಾಂಜಿ ಅಬ್ದುಲ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿದರು.ಜ್ಯೋತ್ಸ್ನಾ ಕಡಂದೇಲು ಪ್ರಾರ್ಥನೆ ಹಾಡಿದರು.

ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಭಡ್ತಿಗೊಂಡ ಶ್ರೀ ಎನ್ ಸದಾಶಿವ ನಾಯಕ್ ರವರನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಗೌರವಿಸಲಾಯಿತು ಹಿರಿಯ ಸಂಸ್ಕೃತ ಅಧ್ಯಾಪಕರಾದ ಶ್ರೀ ರಾಜಗೋಪಾಲ ಪುಣಿಂಚತ್ತಾಯರವರು ಸನ್ಮಾನಿಸಿದರು.
ಸಂಘಟನೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜಾರಾಮ ಕೆ.ವಿ ತಮ್ಮ ಅಧಿಕಾರ ಸ್ವೀಕರಿಸಿ ಮಾತನಾಡಿದರು.ಉಪಾಧ್ಯಕ್ಷರುಗಳಾಗಿ ಗುರುಪ್ರಸಾದ್ ರೈ ಮತ್ತು ರಾಜೇಶ್ ಎಸ್ ,ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಎ, ಜೊತೆ ಕಾರ್ಯದರ್ಶಿಗಳಾಗಿ ಜ್ಯೋತಿಕುಮಾರಿ ಮತ್ತು ಕಿರಣ ಶಂಕರ ಕೆ , ಖಜಾಂಜಿಯಾಗಿ ಪ್ರದೀಪ್ ಕುಮಾರ್ ಶೆಟ್ಟಿ ಆಯ್ಕೆಯಾದರು.

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಉಪಜಿಲ್ಲೆಯ ಮಹಾಸಭೆ
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮಂಜೇಶ್ವರ ಉಪಜಿಲ್ಲಾ ಮಹಾಸಭೆಯನ್ನು ಶ್ರೀ ಕೋಚಣ್ಣ ಶೆಟ್ಟಿ ನಿವೃತ್ತ ಮುಖ್ಯ ಶಿಕ್ಷಕರು ಉದ್ಘಾಟಿಸಿದರು.
-->
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮಂಜೇಶ್ವರ ಉಪಜಿಲ್ಲಾ ಮಹಾಸಭೆಯು ಜಿ. ಎಚ್. ಎಸ್. ಎಸ್. ಪೈವಳಿಕೆ ನಗರದಲ್ಲಿ ಆಗಸ್ಟ್ 24ರಂದು ಜರಗಿತು. .ಯು.ಪಿ. ಶಾಲೆ ಕುರುಡಪದವಿನ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕೋಚಣ್ಣ ಶೆಟ್ಟಿ ಸಭೆಯನ್ನು ಉಧ್ಘಾಟಿಸಿ, ಕನ್ನಡ ಮಾಧ್ಯಮ ಅಧ್ಯಾಪಕ ಸಂಘವು ಒಂದು ಹೆಮ್ಮರದಂತಿದ್ದು ಇದರ ಬೇರುಗಳು ಎಲ್ಲೆಡೆ ಹರಡಿ ನೀರನ್ನು ಹೀರುವಂತೆ ಎಲ್ಲರನ್ನೂ ಸಂಘಟಿಸಿ ಬೆಳೆಯಲೆಂದು ಹಾರೈಸಿದರು. ಸಂಘಟನೆಯ ಉಪಜಿಲ್ಲಾ ಅಧ್ಯಕ್ಷ ಶ್ರೀ ಶ್ರೀನಿವಾಸ ರಾವ್ ಸಭಾಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ ಪದೋನ್ನತಿ ಪಡೆದುದಕ್ಕೆ ಅಭಿನಂದಿಸಲಾಯಿತು. ಸಂಘದ ಕೆಂದ್ರ ಸಮಿತಿಯ ಅಧಿಕೃತ ವಕ್ತಾರ ಶ್ರೀ ವಿಶಾಲಾಕ್ಷ ಪುತ್ರಕಳ ಪ್ರಾಸ್ತಾವಿಕ ಭಾಷಣ ಗೈದರು. ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ ಟಿ. ಡಿ. ಸದಾಶಿವ ರಾವ್,ಗೌರವಾಧ್ಯಕ್ಷ ಶ್ರೀ ರಾಘವ ಬಲ್ಲಾಳ್ , ಶ್ರೀ ವಿಶ್ವನಾಥ್ ಕೆ,ಶ್ರೀಮತಿ ಪದ್ಮಾವತಿ, ಜಿಲ್ಲಾಪಂಚಾಯತು ಸದಸ್ಯ ಶ್ರೀ ಶಂಕರ ರೈ ಮಾಸ್ತರ್, ಶ್ರೀ ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು. ಉಪಜಿಲ್ಲಾ ಕಾರ್ಯದರ್ಶಿ ಶ್ರೀ ಜಬ್ಬಾರ್ ಸ್ವಾಗತಿಸಿದರುಶ್ರೀ ಅಶೋಕ್ ಕುಮಾರ್ ನಿರೂಪಿಸಿ, ಶ್ರೀ ಭಾಸ್ಕರ ಮಾಸ್ತರ್ ಧನ್ಯವಾದವಿತ್ತರು


 ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಭಡ್ತಿಗೊಂಡ ಶ್ರೀ ನಂದಿಕೇಶನ್  ಇವರನ್ನು ಸನ್ಮಾನಿಸಲಾಯಿತು.

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ (ರಿ.) ಇದರ ಮಂಜೇಶ್ವರ ಉಪಜಿಲ್ಲಾ ಘಟಕದ ಮಹಾಸಭೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಭಡ್ತಿ ಹೊಂದಿದ ಶ್ರೀ ನಂದಿಕೇಶನ್ ಇವರನ್ನು ಅಭಿನಂದಿಸಿ ಗೌರವಿಸಲಾಯಿತು. ಜಿ.ಎಚ್.ಎಸ್.ಎಸ್.ಪೈವಳಿಕೆಯಲ್ಲಿ ನಡೆದ ಈ ಸಮಾರಂಭದಲ್ಲಿ ಅಧ್ಯಾಪಕರು ತಮ್ಮ ಔದ್ಯೋಗಿಕ ಚೌಕಟ್ಟನ್ನು ಮೀರದೆ ಅದರ ಉನ್ನತಿಯನ್ನು ಉಳಿಸಿಕೊಳ್ಳಬೇಕು,ಆಗ ಮಾತ್ರ ಕಾಸರಗೋಡಿನ ಕನ್ನಡ ಶಾಲೆಗಳು ಪುನ: ಮಕ್ಕಳಿಂದ ತುಂಬಿ ತುಳುಕುವಂತಾದೀತು. ಹಾಗೇನೇ ದೊರಕಿರುವ ಸೌಲಭ್ಯಗಳನ್ನೂ ಅಧ್ಯಾಪಕರು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕರೆಯಿತ್ತರು. .ಯು.ಪಿ.ಶಾಲೆ ಕುರುಡಪದವಿನ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕೋಚಣ್ಣ ಶೆಟ್ಟಿ ಸನ್ಮಾನಿಸಿದರು





Friday 22 August 2014


-->
23-08-2014
ಕನ್ನಡದ ಶ್ರೇಷ್ಠ ಸಾಹಿತಿ ಯು.ಆರ್ ಅನಂತಮೂರ್ತಿಯವರ ನಿಧನಕ್ಕೆ ಕನ್ನಡ ಅಧ್ಯಾಪಕ ಸಂಘಟನೆಯ ವತಿಯಿಂದ ಸಂತಾಪ
ಸಾಹಿತ್ಯ ಸಮಾಜದ ಕೈಗನ್ನಡಿ ವರ್ತಮಾನ ಕಾಲದ ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ಅದ್ಭುತ ಬರವಣಿಯ ಮೂಲಕ ಜನರಿಗೆ ಮನಮುಟ್ಟುವಂತೆ ಮಾಡುತ್ದಿದ್ದ ಹಿರಿಯ ಸಾಹಿತಿ ಯು.ಆರ್ ಅನಂತಮೂರ್ತಿಯವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಸಾಹಿತಿ ಮಾತ್ರವಲ್ಲದೆ ಉತ್ತಮ ಪ್ರಜಾಪ್ರಭುತ್ವ ನಾಯಕತ್ವಗುಣವನ್ನೂ ಹೊಂದಿದ್ದರು. ಕೇರಳದ ಕೊಟ್ಟಾಯಂ ನ ಮಹಾತ್ಮಾಗಾಂಧಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಕೇರಳೀಯರ ಮನಗೆದ್ದ ಶ್ರೀಯುತರು ಉಭಯ ರಾಜ್ಯಗಳ ಸಂ ವೇದನಾ ಕೊಂಡಿಯೆನಿಸಿದ್ದರು. ಅವರು ಬದುಕಿ ಬಂದ ಹಾದಿ ವಿಚಾರಧಾರೆ ಮತ್ತು ವಿಮರ್ಶಾತ್ಮಕ ಚಿಂತನೆಗಳು ಇಂದಿನ ಜನಾಂಗಕ್ಕೆ ಮಾರ್ಗದರ್ಶಿಯಾಗಿದೆ. ಅಮರ ಆತ್ಮಕ್ಕೆ ಸದ್ಗತಿ ಮತ್ತು ಅಗಲಿಕೆಯ ದುಖವನ್ನು ಸಹಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎ೦ದು ಸಂಘಟನೆ ಪ್ರಾರ್ಥಿಸುತ್ತಿದೆ.

Thursday 21 August 2014


 ದಿನಾಂಕಃ 21-08-2014.
ಉದುಮದಲ್ಲಿ ಹೊಸದಾಗಿ ಆರಂಭಗೊಳ್ಳಲಿರುವ ಸರಕಾರಿ ಕಾಲೇಜಿನಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸಬೇಕು - ಕನ್ನಡ ಅಧ್ಯಾಪಕ ಸಂಘ.
              ಭಾಷಾ ಅಲ್ಪಸಂಖ್ಯಾತ ಶಾಲೆಗಳ ಆದಾಯಕರವಲ್ಲದ ವಿಷಯದಲ್ಲಿ ಕೇರಳ ಸರಕಾರವು ಸಂಘಟನೆಯ ಪ್ರಯತ್ನದ ಫಲವಾಗಿ   ಹೊಸದಾಗಿ ಆದೇಶವೊಂದನ್ನು ಹೊರಡಿಸಿ ಅಧ್ಯಾಕಪ ಹುದ್ದೆಯನ್ನು ಉಳಿಸುವ ಪ್ರಯತ್ನ ಮಾಡಿದೆ. ಇದಕ್ಕಾಗಿ ಸಂಘಟನೆ ಸರಕಾರವನ್ನು ಅಭಿನಂದನೆಗೈದಿದೆ. ಮೂರು ವರ್ಷಗಳಿಂದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಇದಕ್ಕಾಗಿ ಸರಕಾರವನ್ನು ನಿರಂತರ ಸಂಪರ್ಕಿಸಿತ್ತು.
            ಉದುಮದಲ್ಲಿ ಹೊಸದಾಗಿ ಆರಂಭಗೊಳ್ಳುವ ಸರಕಾರಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಲಿಯುವ ಅವಕಾಶವನ್ನು ಮಾಡಬೇಕೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಸರಕಾರವನ್ನು ಒತ್ತಾಯಿಸಿದೆ. ಆ ಕಾಲೇಜಿನ ಆಸುಪಾಸಿನಲ್ಲಿ ಅನೇಕ ಕನ್ನಡಿಗರು ವಾಸಿಸುತ್ತಿದ್ದು ಅವರಿಗೆ ಕನ್ನಡ ಕಲಿಯಲು ಇದು ವರದಾನವಾಗಿದೆ ಎ೦ದು ಸಂಘಟನೆ ಅಭಿಪ್ರಾಯಪಟ್ಟಿದೆ. ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಹೊಸದಾಗಿ ಪ್ರಾರಂಭಗೊಳ್ಳಲಿರುವ ಎಲ್ಲಾ ಹೈಯರ್ ಸೆಕಂಡರಿಗಳಲ್ಲಿ ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ಕಲಿಯಲು ಅವಕಾಶವಿರ ಬೇಕು ಮತ್ತು ಇದಕ್ಕಾಗಿ ಬೇಕಾದ ಆದೇಶವನ್ನು ಈ ಕೂಡಲೇಹೊರಡಿಸ ಬೇಕೆಂದು ಸಂಘಟನೆ ಅಧಿಕೃತರನ್ನು ಒತ್ತಾಯಿಸಿದೆ.
ಎನ್.ಎಚ್.ಎಸ್.ಎಸ್.ಪೆರಡಾದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಘಟಕದ ಕಾರ್ಯಕಾರಿ ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರಾಜಾರಾಮ ಕೆ.ವಿ.ವಹಿಸಿದ್ದರು. ಕೇಂದ್ರಸಮಿತಿ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಮತ್ತು ಪ್ರಭಾವತಿ ಕೆದಿಲ್ಲಾಯ ಪುಂಡೂರು ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಪುರುಷೋತ್ತಮ ಕುಲಾಲ್ ಸ್ವಾಗತಿಸಿ , ಖಜಾಂಜಿ ಅಬ್ದುಲ್ ರಹಿಮಾನ್ ವಂದಿಸಿದರು.

Monday 18 August 2014


          ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಉಪಜಿಲ್ಲಾ ಮಹಾ ಸಭೆಗಳು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮಂಜೇಶ್ವರ ಮತ್ತು ಕುಂಬಳೆ ಉಪಜಿಲ್ಲಾ ಘಟಕಗಳ ಮಹಾ ಸಭೆಗಳು ಇದೇ ಬರುವ ಅಗೋಸ್ತು 24 ರವಿವಾರ ದಂದು ನಡೆಯಲಿದೆ. ಜಿ.ಎಚ್.ಎಸ್.ಎಸ್.ಪೈವಳಿಕೆ ನಗರದಲ್ಲಿ ನಡೆಯುವ ಮಂಜೇಶ್ವರ ಘಟಕದ ಮಹಾಸಭೆಯಲ್ಲಿ ಅಡ್ವ. ಥೋಮಸ್ ಡಿ'ಸೋಜಾ ಕನ್ನಡದ ಧುರೀಣರು ಮುಖ್ಯ ಅತಿಥಿಯಾಗಿರುವರು. ಉಪಜಿಲ್ಲಾ ಶಿಕ್ಷಣಾಧಿಕಾರಿ ಎನ್ .ನಂದಿಕೇಶನ್, ಸಂಘಟನೆಯ ಗೌರವಾಧ್ಯಕ್ಷರಾದ ಎನ್.ಕೆ.ಮೋಹನ್ ದಾಸ್, ಉಪಾಧ್ಯಕ್ಷರಾದ ಸತ್ಯನಾರಾಯಣ ರಾವ್ ಕೆ.ವಿ, ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ ಮತ್ತು ಘಟಕದ ಅಧ್ಯಕ್ಷ ಶ್ರೀನಿವಾಸ ರಾವ್ ಉಪಸ್ಥಿತರಿರುವರು. ಜಿ.ವಿ.ಎಚ್.ಎಸ್.ಎಸ್.ಮುಳ್ಳೇರಿಯಾದಲ್ಲಿ ನಡೆಯುವ ಕುಂಬಳೆ ಉಪಜಿಲ್ಲಾ ಮಹಾಸಭೆಯಲ್ಲಿ ಪಿ.ರಾಜಗೋಪಾಲ ಪುಣಿಂಚತ್ತಾಯ,ನಿವೃತ್ತ ಸಂಸ್ಕೃತ ಅಧ್ಯಾಪಕರು ಮುಖ್ಯ ಅತಿಥಿಗಳಾಗಿರುವರು. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಎನ್.ಸದಾಶಿವ ನಾಯಕ್ , ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ,ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಮತ್ತು ಘಟಕದ ಅಧ್ಯಕ್ಷ ರಾಜಾರಾಮ ಕೆ.ವಿ. ಉಪಸ್ಥಿತರಿರುವರು.
ಕಾಸರಗೋಡಿನಲ್ಲಿ ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು, ಕನ್ನಡವನ್ನು ಬೆಳೆಸಲು ನಾವು ಜಾಗೃತರಾಗಬೇಕಾಗಿದೆ.ಇದಕ್ಕಾಗಿ ಉಪಜಿಲ್ಲಾ ಘಟಕಗಳು ಇನ್ನಷ್ಟು ಕ್ರಿಯಾತ್ಮಕವಾಗಬೇಕಾಗಿದೆ. ಆದುದರಿಂದ ನಡೆಯಲಿರುವ ಉಪಜಿಲ್ಲಾ ಮಹಾಸಭೆಗಳಲ್ಲಿ ತಾವು ಸಕ್ರಿಯವಾಗಿ ಪಾಲ್ಗೊಂಡು ಅಮೂಲ್ಯವಾದ ಸಲಹೆ ಸೂಚನೆಗಳನ್ನಿತ್ತು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತಿದ್ದೇವೆ.

                                                             ಅಧ್ಯಕ್ಷರು ಮತ್ತು ಸದಸ್ಯರು
                                                                   ಕೇಂದ್ರ ಸಮಿತಿ
                                                 ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ



ಕಾಸರಗೋಡಿನಲ್ಲಿ ನಿರಂತರ ಕನ್ನಡ ಚಟುವಟಿಕೆಗಳು ನಡೆಯಬೇಕು -ಅಧ್ಯಾಪಕರು ಇದಕ್ಕೆ ನೇತೃತ್ವ ವಹಿಸಬೇಕು.

ಪಳ್ಳಿಕ್ಕರೆ, ಆಗಸ್ಟ್ 10 – ಕಾಸರಗೋಡಿನಲ್ಲಿ ನಿರಂತರ ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ನಡೆಯುತ್ತಿರಬೇಕು. ನಮ್ಮನ್ನು ಕನ್ನಡ ಸಂಸ್ಕೃತಿಯಿಂದ ಹಿಂಜರಿಯುವಂತೆ ಮಾಡುವ ಯಾವುದೇ ಶಕ್ತಿಗಳಿಗೆ ನಾವು ತಲೆಬಾಗಬಾರದು, ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಅದನ್ನು ಎದುರಿಸುವ ಸಾಂವಿದಾನಿಕ ಹಕ್ಕು ನಮಗಿದೆ,ಅದೇ ರೀತಿ ಕನ್ನಡವನ್ನು ಕಟ್ಟಿ ಬೆಳೆಸುವ ಕರ್ತವ್ಯವೂ ನಮಗಿದೆ ಇದರಿಂದ ವಿಮುಖವಾಗುವುದು ಸರ್ವಥಾ ಸರಿಯಲ್ಲ. ಕನ್ನಡ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅಗತ್ಯವಾದ ಸಂಪನ್ಮೂಲಗಳು ನಮ್ಮ ಮಣ್ಣಿನಲ್ಲಿಯೇ ಇದೆ ಅವುಗಳನ್ನು ಗುರುತಿಸಿ, ಕ್ರೋಡೀಕರಿಸಿ ತಮ್ಮದಾಗಿಸುವ ಚಾಣಾಕ್ಷತನವನ್ನು ನಾವು ಮೈಗೂಡಿಸಬೇಕಾಗಿದೆ, ಇದಕ್ಕಾಗಿ ಕನ್ನಡ ಅಧ್ಯಾಪಕ ಸಂಘವು ನಿರಂತರ ಪ್ರಯತ್ನಿಸಲಿ ಅದಕ್ಕೆ ನಮ್ಮ ಕೈಲಾದ ಸಹಾಯ ನಾವು ಮಾಡುವ ಪ್ರಯತ್ನ ಮಾಡುತ್ತೇವೆ - ಎ೦ದು ಹೊಸದುರ್ಗ ಕನ್ನಡ ಸಂಘದ ಅಧ್ಯಕ್ಷರಾದ ಬಿ.ವಸಂತ ಶೆಣೈ ಯವರು ನುಡಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಹೊಸದುರ್ಗ- ಬೇಕಲ ಉಪಜಿಲ್ಲಾ ಘಟಕಗಳ ಮಹಾಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು. ಸಂಘಟನೆಯ ಉಪಜಿಲ್ಲಾ ಮಹಾಸಭೆಯು ಜಿ.ಎಚ್.ಎಸ್.ಎಸ್. ಪಳ್ಳಿಕ್ಕರೆಯಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ವಾರಿಜ ಎ೦ ವಹಿಸಿದ್ದರು. ಲಕ್ಷ್ಮಣ ಎಚ್. ಹೊಸದುರ್ಗ, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಸತ್ಯನಾರಾಯಣ ರಾವ್.ಕೆ.ವಿ., ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ, ನಿವೃತ್ತ ಮುಖ್ಯ ಶಿಕ್ಷಕರಾದ ಶಶಿಕಲಾ ಎ೦.,ರಾವಣೇಶ್ವರ ಶಾಲೆಯ ಮುಖ್ಯ ಶಿಕ್ಷಕರಾದ ಭಾರತಿ ಶೆಣೈ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ. ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ವರದಿ ವಾಚನ, ಲೆಕ್ಕಪತ್ರ ಮಂಡನೆ ಮತ್ತು ಅಂಗೀಕಾರ ನಡೆಯಿತು. ಸಂಘಟನೆಯ ಬಲವರ್ಧನೆ ಮತ್ತು ಸದಸ್ಯರ ಸಮಸ್ಯಗಳ ಕುರಿತು ಚರ್ಚೆ ನಡೆಯಿತು. ಹೇಮಂತ್ ಕುಮಾರ್, ನಯನಕುಮಾರಿ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪುಷ್ಪಾವತಿ ಕೆ. ಅಧ್ಯಕ್ಷರಾಗಿ, ತಿಲಕವಾಣಿ ಕಾರ್ಯದರ್ಶಿಯಾಗಿ ಮತ್ತು ರಜನಿಕುಮಾರಿ ಖಜಾಂಜಿಯಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರದೊಂದಿಗೆ ಸಭೆ ಸಂಪನ್ನಗೊಂಡಿತು.


 ಕನ್ನಡ ಅಧ್ಯಾಪಕರು ಕೇರಳ ಕರ್ನಾಟಕ ರಾಜ್ಯಗಳ ಸಾಂಸ್ಕೃತಿಕ ರಾಯಭಾರಿಗಳಾಗಲಿ

ಬಂದಡ್ಕ, ಆಗಸ್ಟ್ 9. ಗಡಿನಾಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ಕನ್ನಡ ಮಾಧ್ಯಮದಲ್ಲಿ ಕಲಿತರೆ ಕೇರಳ ಕರ್ನಾಟಕ ರಾಜ್ಯಗಳೆರಡರಲ್ಲೂ ಸಲೀಸಾಗಿ ವ್ಯವಹಾರ ಮಾಡಲು ಸಾಧ್ಯವಾಗುವುದು. ಪ್ರಾದೇಶಿಕವಾಗಿ ಕೇರಳದಲ್ಲಿ ವಾಸಿಸುವ ನಮಗೆ ಕರ್ನಾಟಕದಲ್ಲಿಯೂ ಶಿಕ್ಷಣ ಮುಂದುವರಿಸುವ ಮತ್ತು ಉದ್ಯೋಗ ಮಾಡುವ ಅವಕಾಶವಿದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಲು ಅಗತ್ಯವಾದ ಪರಿಕರಗಳ ಕೊರತೆಯನ್ನು ನೀಗಿಸುವ ಕಾರ್ಯಕ್ಕಾಗಿ ಹುಟ್ಟಿಕೊಂಡ ಕನ್ನಡ ಅಧ್ಯಾಪಕ ಸಂಘಟನೆ ಕೇರಳ ಕರ್ನಾಟಕ ರಾಜ್ಯಗಳ ಸಾಂಸ್ಕೃತಿಕ ರಾಯಭಾರಿಗಳಾಗಲಿ .ನಮ್ಮ ಮಕ್ಕಳು ಶಿಸ್ತು ಬದ್ಧ ಜೀವನವನ್ನು ರೂಪಿಸಲು ಅಗತ್ಯವಾದ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸಲು ಸಾಧ್ಯವಾಗುವಂತಹ ಸ್ಥಿತಿಯನ್ನು ನಮ್ಮ ಎಲ್ಲಾ ಶಾಲೆಗಳಲ್ಲೂ ನಿರ್ಮಾಣವಾಗುವಂತೆ ಮಾಡುವಲ್ಲಿ ಕಾರ್ಯನಿರತರಾಗಬೇಕು, ಇದರಿಂದ ಕಾಸರಗೋಡಿನ ಕನ್ನಡಕ್ಕೆ ಇನ್ನಷ್ಟು ಹೊಳಪು ಬರಬಹುದು ಎ೦ದು ನಿವೃತ್ತ ಕನ್ನಡ ಶಿಕ್ಷಕರಾದ ಬಿ.ಎನ್.ಸುಬ್ರಹ್ಮಣ್ಯ ಭಟ್ ಹೇಳಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಕಾಸರಗೋಡು ಉಪಜಿಲ್ಲಾ ಘಟಕದ ಮಹಾಸಭೆಯನ್ನು ಉದ್ಘಾಟಿ ಸಿ ಮಾತನಾಡುತ್ತಿದ್ದರು. ಸಂಘಟನೆಯ ಉಪಜಿಲ್ಲಾ ಮಹಾಸಭೆ ಜಿ.ಎಚ್ .ಎಸ್.ಎಸ್. ಬಂದಡ್ಕದಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಪದ್ಮನಾಭ ಎಸ್.ಎಸ್., ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ, ಉಪಸ್ಥಿತರಿದ್ದರು. ದಿನೇಶ್ ಬಿ. ಸ್ವಾಗತಿಸಿ, ನಿತ್ಯಾನಂದ ಎ೦.ಕೆ. ವಂದಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ವಾರ್ಷಿಕ ವರದಿ,ಲೆಕ್ಕಪತ್ರ ಮಂಡನೆಯ ಬಳಿಕ ಸದಸ್ಯರಿಂದ ಸಮಸ್ಯೆಗಳ ಮಂಡನೆ ಮತ್ತು ಚರ್ಚೆ ನಡೆಯಿತು. ಸಂಘಟನೆಯ ಕೇಂದ್ರ ಉಪಾಧ್ಯಕ್ಷಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಮತ್ತು ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ. ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಬಳಿಕ ಉಪಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಾಜೇಶ್ವರ ಸಿ.ಎಚ್. ಅಧ್ಯಕ್ಷರಾಗಿ ಪ್ರೀತಂ ಎ.ಕೆ.ಕಾರ್ಯದರ್ಶಿಯಾಗಿ ಮತ್ತು ಖಜಾಂಜಿಯಾಗಿ ಬಾಬು ಆಯ್ಕೆಯಾದರು.ನೂತನ ಪದಾಧಿಕಾರಿಗಳಿಂದ ಅಧಿಕಾರ ಸ್ವೀಕಾರ ನಡೆಯಿತು.

Saturday 16 August 2014

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ,ಕಾಸರಗೋಡು

ನಾವು ನಮ್ಮೊಳಗೆ

 ಪ್ರೀತಿಯ ಅಧ್ಯಾಪಕ ಬಂಧುಗಳೇ,
       ಹದಿನಾರು ವಸಂತಗಳನ್ನು ಯಶಸ್ವಿಯಾಗಿ ದಾಟಿ ಮುನ್ನಡೆಯುತ್ತಿರುವ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ನಿಮ್ಮೆಲ್ಲರ ಸಹಕಾರದಿಂದ ಇಂದು ಕಾಸರಗೋಡು ಜಿಲ್ಲೆಯ ಪ್ರಬಲ ಸಂಘಟನೆಯೆಂಬ ಕೀರ್ತಿಗೆ ಪಾತ್ರವಾಗಿದೆ.
       1997 ರಲ್ಲಿ ಶಾಲಾರಂಭವಾಗಿ ಹಲವುತಿಂಗಳು ಕಳೆದರೂ ಕನ್ನಡ ಶಾಲೆಗಳಿಗೆ ಕನ್ನಡ ಪಠ್ಯಪುಸ್ತಕ ಲಭಿಸದೇ ಇದ್ದಾಗ ಅದನ್ನು ಪ್ರತಿಭಟಿಸಲು ಕನ್ನಡ ಅಧ್ಯಾಪಕರು ಒಗ್ಗೂಡಿದ ಫಲವಾಗಿ ಹುಟ್ಟಿಕೊಂಡ ಈ ಸಂಘವು ಆ ಬಳಿಕ ದಿಟ್ಟವಾಗಿ ಮುನ್ನಡೆದು ಕಾಸರಗೋಡು ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎದುರಿಸುತ್ತಿರುವ ಹೆಚ್ಚಿನೆಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡಿದೆ.
      ಹೊಸದುರ್ಗ ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಅಧ್ಯಾಪಕರ ಹುದ್ದೆಗೆ ಕನ್ನಡ ಬಾರದ ಅಧ್ಯಾಪಿಕೆಯನ್ನು ನೇಮಕ ಮಾಡಿದುದರ ಫಲವಾಗಿ ಆ ಅಧ್ಯಾಪಕಿ ಅಲ್ಲಿಂದ ಎತ್ತಂಡಿಯಾದುದು ಕನ್ನಡಿಗರ ಒಗ್ಗಟ್ಟಿನ ಹೋರಾಟಕ್ಕೆ ಸಂದ ಜಯವಾಗಿದೆ.
      ವಿದ್ಯಾರಂಗ ರಾಜ್ಯ ಸಾಹಿತ್ಯೋತ್ಸವದ ಸ್ಪರ್ಧೆಗಳಲ್ಲಿ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳು ಭಾಗವಹಿಸುವಂತಾದುದು ಅಧ್ಯಾಪಕರ ಸಂಘದ ಮನವಿಗೆ ಸಿಕ್ಕ ಪುರಸ್ಕಾರವಾಗಿದೆ. 
       ಒಂದು,ಮೂರು,ಐದು ಮತ್ತು ಏಳನೇ ತರಗತಿಯ ಕನ್ನಡ ಕಲಿಕಾ ಡಿ.ವಿ.ಡಿ.ಬಿಡುಗಡೆ ಕನ್ನಡ ಮಾಧ್ಯಮ ಅಧ್ಯಾಪಕರ ಕಿರೀಟಕ್ಕೆ ಇನ್ನೊಂದು ಗರಿಯಾಗಿದೆ.ನೂರಾರು ಪಾಠ ಪುಸ್ತಕಗಳನ್ನು ಸರಕಾರ ಈ ಶೈಕ್ಷಣಿಕ ವರ್ಷದಲ್ಲಿ ತಯಾರಿಸಿ ಅದಕ್ಕೆ ಪೂರಕವಾದ ಅಧ್ಯಾಪಕ ಪಠ್ಯವನ್ನೂ ಸಿದ್ಧಗೊಳಿಸಿದೆ. ಅದರೊಂದಿಗೆ ಕಲಿಕಾ ಡಿ.ವಿ.ಡಿ.ಗಳ ತಯಾರಿಗೂ ಶಿಫಾರಸು ಮಾಡಿತ್ತು. ಕಾಸರಗೋಡಿನಲ್ಲಿ ಜರಗಿದ ಕನ್ನಡ ಪಠ್ಯ ಪುಸ್ತಕ ರಚನಾ ಕಮ್ಮಟದಲ್ಲಿ ಕನ್ನಡಿಗರು ತಯಾರಿಸಿದ ಕಲಿಕಾ ಸಂಪನ್ಮೂಲಕ್ಕೆ ರಾಜ್ಯಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಇದಕ್ಕೆ ಸಹಕರಿಸಿದ ಎಲ್ಲರನ್ನೂ ಅಧ್ಯಾಪಕ ಸಂಘ ಶ್ಲಾಘಿಸುತ್ತಿದೆ.
      ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಯವರು ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ಸರಕಾರವು 'ಪಂಪ ಪ್ರಶಸ್ತಿ ' ಯನ್ನು ನೀಡಿ ಗೌರವಿಸಿರುವುದೂ ಕಾಸರಗೋಡಿನ ಕನ್ನಡಿಗರಿಗೆ ಸಂದ ಗೌರವವಾಗಿದೆ. ಈ ಸಂದರ್ಭದಲ್ಲಿ ಸಂಘವು ಕಯ್ಯಾರರನ್ನು ಅಭಿನಂದಿಸಿದೆ. 
    ಕನ್ನಡ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ವಿವಿಧ ಇಲಾಖೆಗಳಿಗೆ ಈ ವರ್ಷ ಐವತ್ತಕ್ಕೂ ಹೆಚ್ಚು ಮನವಿಗಳನ್ನು ಸಲ್ಲಿಸಲಾಗಿದೆ. ನಮ್ಮ ಶಾಲೆಗಳಿಗೆ ಬರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಲ ಸರ್ವಾಂಗೀಮ ಅಭಿವೃದ್ಧಿ , ಅವರಿಗೆ ಗುಣಮಟ್ಟದ ಶಿಕ್ಷಣ ನಮ್ಮ ಗುರಿಯಾಗಿದೆ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಮೇಲೆ ದಬ್ಬಾಳಿಕೆ ನಡೆದಾಗ ಅದರ ವಿರುದ್ಧ ಹೋರಾಟ ನಡೆಸಿದ್ದೇವೆ. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘವು ನಡೆಸುತ್ತಿರುವ ಎಲ್ಲಾ ಚಟುವಟಿಕೆಗಳಿಗೆ , ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತು ದುಡಿಯುತ್ತಿರುವ  ನಿಮಗೆಲ್ಲರಿಗೂ ಅನಂತ ವಂದನೆಗಳು.
      
ವಿಳಾಸ 
ಕನ್ನಡ ಅಧ್ಯಾಪಕ ಭವನ,ಬೀರಂತಬೈಲು, ಅಂಚೆ - ಕಾಸರಗೋಡು. 671121,ಕೇರಳ ರಾಜ್ಯ.
Kannada Adhyapaka  Bhavana,  Beeranthabail, Post- Kasaragod. 671121.
ದೂರವಾಣಿ, 9495618082, 9447490287, 9400014534.
Mail, kannadaadyapakasanga@gmail.com

  




   ಅಧ್ಯಕ್ಷರು , ಟಿ.ಡಿ.ಸದಾಶಿವ ರಾವ್. 


     
                 












ಪ್ರಧಾನ ಕಾರ್ಯದರ್ಶಿ, ಸುಬ್ರಹ್ಮಣ್ಯ ಭಟ್ ಕೆ.