FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday 27 June 2015

27-062015
ಕನ್ನಡ ಪಠ್ಯ ಪುಸ್ತಕ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಪ್ರತಿಭಟಿಸಿ ಧರಣಿ ಮುಷ್ಕರ
ಕಾಸರಗೋಡು ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಸವಲತ್ತನ್ನು ನೀಡುವ ಜವಾಬ್ದಾರಿ ಸರಕಾರಕ್ಕಿದೆ. ಪ್ರಜಾಪ್ರಭುತ್ವ ಸರಕಾರ ಅಸ್ಥಿತ್ವವಿರುವ ಪ್ರದೇಶದಲ್ಲಿ ಜನರು ಬೀದಿಗಿಳಿಯುವುದು ಸರಕಾರಕ್ಕೆ ಅವಮಾನ. ನಮಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಇನ್ನಾದರೂ ಈ ಸತ್ಯವನ್ನು ಮನಗಂಡು ವ್ಯವಹರಿಸಿದರೆ ಜನರು ತಮ್ಮ ಪಾಡಿಗೆ ನಿಶ್ಚಿಂತೆಯಿಂದ ಕೆಲಸ ಮಾಡಬಹುದು. ಕಾಸರಗೋಡಿನಲ್ಲಿ ನಡೆಯುವ ಕನ್ನಡ ಕಟ್ಟುವ ಕಾಯಕದಲ್ಲಿ ನಾವೆಲ್ಲಾ ಪಕ್ಷ ಬೇಧವಿಲ್ಲದೆ ಕನ್ನಡಿಗರೆಲ್ಲಾ ಒಂದಾಗಬೇಕು ಎಂದು ಎಸ್.ಎಸ್.ವಿ.ಎಚ್.ಎಸ್.ಎಸ್. ಶಾಲೆಯ ಪ್ರಬಂಧಕರಾದ ಡಾ/ಜಯಪ್ರಕಾಶ್ ತೊಟ್ಟೆತ್ತೋಡಿ ನುಡಿದರು.
 ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಧರಣಿ ಮುಷ್ಕರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ವಹಿಸಿದ್ದರು.ಎಸ್.ವಿ.ಭಟ್ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ,ಬಿ.ಪುರುಷೋತ್ತಮ ಮಾಸ್ತರ್ ಅಧ್ಯಕ್ಷರು ಸಮನ್ವಯ ಸಮಿತಿ ,  ಮುರಳೀಧರ ಬಳ್ಳುಕುರಾಯ ಅಧ್ಯಕ್ಷರು ಕರ್ನಾಟಕ ಸಮಿತಿ, ಡಾ/ರತ್ನಾಕರ ಮಲ್ಲಮೂಲೆಉಪನ್ಯಸಕರು ಕಾಸರಗೋಡು ಕಾಲೇಜು , ಸಂಘಟನೆಯ ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ,ಮಂಜೇಶ್ವರ ಘಟಕಾಧ್ಯಕ್ಷರಾದ ಶ್ರೀನಿವಾಸ ಬಾಕ್ರಬೈಲು, ಕುಂಬಳೆ ಘಟಕಾಧ್ಯಕ್ಷರಾದ ರಾಜಾರಾಮ ಕೆ.ವಿ., ಕೇಂದ್ರದ ಉಪಾಧ್ಯಕ್ಷರಾದ ಕೆ.ವಿ.ಸತ್ಯನಾರಾಯಣ ರಾವ್ ಮತ್ತು ಜೊತೆ ಕಾರ್ಯದರ್ಶಿ ಪ್ರಭಾವತಿ ಕೆದಿಲ್ಲಾಯ ಪುಂಡೂರು ಮಾತನಾಡಿದರು.ಕೇಂದ್ರದ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ಪ್ರಾಸ್ತಾವಿಕ ನುಡಿದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಸಂಘಟನಾ ಕಾರ್ಯದರ್ಶಿ ಸುಕೇಶ್ ಎ ವಂದಿಸಿದರು. ದರಣಿ ಮುಷ್ಕರದ ಬಳಿಕ ಡಿ.ಡಿ.ಇ.ಮತ್ತು ಜಿಲ್ಲಾಧಿಕಾರಿಯವರಿಗೆ ಮನವಿ  ಸಲ್ಲಿಸಲಾಯಿತು.


Sunday 21 June 2015



ಮಕ್ಕಳ ಸಾಹಿತ್ಯ ಸಂಗಮ ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲೆ (ರಿ).
ಮಕ್ಕಳ ಧ್ವನಿ 2015.ಸಂಘಟಕ ಸಮಿತಿ.

ಮಕ್ಕಳ ಧ್ವನಿಗೆ ಸರ್ವಾಧ್ಯಕ್ಷ ಮತ್ತು ಕವಿಗೋಷ್ಠಿ,ಕಥಾಗೋಷ್ಠಿ ಅಧ್ಯಕ್ಷರ ಆಯ್ಕೆ
ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ
ಜರಗುವ ಮಕ್ಕಳ ಧ್ವನಿ ಕಾರ್ಯಕ್ರಮವು ಇದೇ ಬರುವ ಆಗಸ್ಟ್ ತಿಂಗಳಲ್ಲಿ ಮಹಾಜನ ಸಂಸ್ಕೃತ ಕಾಲೇಜು
ಉನ್ನತ ಪ್ರೌಢ ಶಾಲೆ ನೀರ್ಚಾಲಿನಲ್ಲಿ ನಡೆಯಲಿರುವುದು. ಮೂರು ಜಿಲ್ಲೆಗಳ ವಿವಿಧ ಶಾಲೆಗಳಿಂದ ಮಕ್ಕಳು
ಇದರಲ್ಲಿ ಭಾಗವಹಿಸುತ್ತಾರೆ. ಕಾರ್ಯಕ್ರಮದ ಅಂಗವಾಗಿ ನಡೆಯುವ ಕವಿಗೋಷ್ಟಿ, ಕಥಾಗೋಷ್ಠಿಗಳ ಅಧ್ಯಕ್ಷರು ಮತ್ತು ಸರ್ವಾಧ್ಯಕ್ಷರ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ.ಇದಕ್ಕಾಗಿ ಇದೇ ಬರುವ 12-07-2015 ನೇ ರವಿವಾರ ಪೂರ್ವಾಹ್ನ 10.30 ಗಂಟೆಗೆ ಸರಿಯಾಗಿ ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢ ಶಾಲೆ ನೀರ್ಚಾಲಿನಲ್ಲಿ ಆಯ್ಕೆಯ ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ. ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಮಕ್ಕಳು ಇದರಲ್ಲಿ ಭಾಗವಹಿಸಬಹುದು.ಭಾಗವಹಿಸಲಿಚ್ಛಿಸುವ ಮಕ್ಕಳು ತಮ್ಮ ಅರ್ಜಿಯನ್ನು ಸ್ವವಿವರಗಳೊಂದಿಗೆ ಜುಲೈ 5ನೇ ತಾರೀಕಿನ ಒಳಗಾಗಿ ಕಳುಹಿಸಿಕೊಡಬೇಕು.ಆಯ್ಕೆಯ ದಿನದಂದು ಅವರು ತಮ್ಮ ಇತ್ತೀಚೆಗಿನ ಭಾವಚಿತ್ರ, ಅರ್ಹತೆಯ ದಾಖಲೆಗಳು ಮತ್ತು ಶಾಲೆಯ ದೃಢೀಕರಣ ಪತ್ರವನ್ನು ತರಬೇಕು.ಅರ್ಜಿ ಸಲ್ಲಿಸುವ ವಿಳಾಸಃ ಸಂಚಾಲಕರು, ಮಕ್ಕಳ ಧ್ವನಿ 2015. ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕಂಡರಿ ಶಾಲೆ ನೀರ್ಚಾಲು, ಅಂಚೆ ನೀರ್ಚಾಲು. ಕಾಸರಗೋಡು, 671321. ಹೆಚ್ಚಿನ ವಿವರಗಳಿಗೆ ಸಂಚಾರಿ ದೂರವಾಣಿ ಸಂಖ್ಯೆಗಳುಃ 9946046561, 9447490287.ಅಥವಾ ಕೇಂದ್ರ ಸಮಿತಿಯನ್ನು ಸಂಪರ್ಕಿಸಬಹುದು.
21-06-2015
ನೀರ್ಚಾಲು ಇತೀ,
ಅಧ್ಯಕ್ಷರು/ ಸಂಚಾಲಕರು
ಮಕ್ಕಳ ಧ್ವನಿ ಕಾರ್ಯಕ್ರಮ 2015.
21-06-2015
ಕನ್ನಡ ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬ ನೀತಿಯನ್ನು ಪ್ರತಿಭಟಿಸಿ ಧರಣಿ ಮುಷ್ಕರಕ್ಕೆಕರೆ

ಶಾಲೆ ಆರಂಭವಾಗಿ ಇಪ್ಪತ್ತು ದಿನಗಳಾಗಿಯೂ ಪಠ್ಯ ಪುಸ್ತಕಗಳ ವಿತರಣೆಯ ಕಾರ್ಯ ಇನ್ನೂ ನಡೆಯದ ಸ್ಥಿತಿ ಸುಶಿಕ್ಷಿತ ಕೇರಳಿಗರೆಂದು ಹೆಮ್ಮೆ ಪಡುವ ನಮಗೆ ಅಪಮಾನವಾಗಿದೆ. ಸಾಕ್ಷರ, ಬ್ಲೆಂಡ್ ಮೊದಲಾನ ನೂತನ ತಂತ್ರಗಳನ್ನು ಶಿಕ್ಷಣ ರಂಗಕ್ಕೆ ಪರಿಚಯಿಸಿದ ಕಾಸರಗೋಡು ಶಿಕ್ಷಣ ವಲಯ; ಅಕ್ಷರಶಃ ದಂಗಾಗಿ ಹೋಗಿದೆ. ಪಾಠ ಪುಸ್ತಕಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ನೀತಿಯನ್ನು ಈ ಕೂಡಲೇ ನಿಲ್ಲಿಸಬೇಕು. ತಕ್ಷಣ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ಒದಗಿಸಿ ಮಕ್ಕಳ ನ್ಯಾಯಯುತ ಹಕ್ಕನ್ನು ಕಾಪಾಡುವ ಪ್ರಾಮಾಣಿಕರ ಪ್ರಯತ್ನವನ್ನು ಮಾಡಬೇಕು ಎ೦ದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್ ನುಡಿದರು. ಅವರು ಕಾಸರಗೋಡು ಬೀರಂತಬೈಲಿನ ಕನ್ನಡ ಅಧ್ಯಾಪಕ ಭವನದಲ್ಲಿ ನಡೆದ ಕೇಂದ್ರ ಸಭೆಯ ಅಧ್ಯಕ್ಷತೆಯನ್ನುವಹಿಸಿ ಮಾತನಾಡುತ್ತಿದ್ದರು., ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ, ಮಹಾಲಿಂಗೇಶ್ವರ ರಾಜ್ ಡಿ.,ಮಂಜೇಶ್ವರ ಘಟಕಾಧ್ಯಕ್ಷರಾದ ಶ್ರೀನಿವಾಸ ರಾವ್, ಕುಂಬಳೆ ಘಟಕಾಕ್ಷರಾದ ರಾಜಾರಾಮ ಕೆ.ವಿ.,ಬೇಕಲ ಹೊಸದುರ್ಗ ಘಟಕಾಧ್ಯಕ್ಷರಾದ ಪುಷ್ಪಾವತಿ ಕೆ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಸುಕೇಶ ಎ, ಅಶೋಕ್ ಕೊಡ್ಲಮೊಗರು, ರತ್ನಪ್ರಭಾ ಕೆ, ಪ್ರದೀಪ್ ಕುಮಾರ್ ಶೆಟ್ಟಿ, ರಜನಿ ಕುಮಾರಿ, ಉಮೇಶ ಕೆ, ಬಾಬು ಕೆ, ಅಬ್ದುಲ್ ರಹಿಮಾನ್ ಎನ್ ಚರ್ಚೆಯಲ್ಲಿ ಭಾಗವಹಿಸಿದರು. ಜೂನ್ 27 ರಂದು ಕಾಸರಗೋಡು ಶಿಕ್ಷಣ ಉಪನಿರ್ದೇಶಕರ ಕಛೇರಿಯ ಮುಂಭಾಗ ಧರಣಿ ಮುಷ್ಕರ ಹೂಡಲು ಕರೆ ನೀಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಎದುರಾಗುವ ಸಮಸ್ಯೆಗಳಿಗೆ ಶಿಕ್ಷಕರನ್ನು ಹೊಣೆಯಾಗಿಸುವ ಹುನ್ನಾರಕ್ಕೆ ಅವಕಾಶ ನೀಡಲಾರೆವು ಎ೦ದು ಸಭೆಯಲ್ಲಿ ಘೋಷಿಸಲಾಯಿತು.
ಬಳಿಕ ಅಧ್ಯಾಪಕ ಭವನ ನಿರ್ವಹಣೆ , ಅಧ್ಯಾಪಕ ಧ್ವನಿ, ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಸಮಾರಂಭ ಮೊದಲಾದ ವಿಚಾರಗಳ ಚರ್ಚೆ ನಡೆಯಿತು. ಒಂದನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಸೇರ್ಪಡೆಯಾದ ಮಕ್ಕಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸುಮಾರು ಹತ್ತು ಸಾವಿರ ರೂಪಾಯಿಗಳಷ್ಟು ಹಣವನ್ನು ಬೇಂಕಿನಲ್ಲಿ ಜಮಾಮಾಡಿ ಹತ್ತನೇ ತರಗತಿ ಪೂರೈಸಿದ ಬಳಿಕ ಆ ಹಣ ಮಕ್ಕಳಿಗೆ ಸಿಗುವಂತೆ ಮಾಡುವ ಯೋಜನೆಯನ್ನು ಕಾರ್ಯಗತ ಮಾಡಲಿದೆ ಇದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಉಂಟುಮಾಡಲು ಸಹಾಯಕ ಎ೦ದು ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ. ನುಡಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರಂತರ ಸಂಪರ್ಕದಿಂದ ಈ ಕೊಡುಗೆ ಕಾಸರಗೋಡಿನ ಕನ್ನಡಿಗರಿಗೆ ಒಲಿದು ಬಂದಿದೆ.ಎ೦ದು ಅವರು ಅಭಿಪ್ರಾಯಪಟ್ಟರು.
ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಪ್ರಭಾವತಿ ಕೆದಿಲ್ಲಾಯ ಪುಂಡೂರು ವಂದಿಸಿದರು.

Wednesday 17 June 2015

-->
ಕೇಂದ್ರ ಸಮಿತಿ ಸಭೆ
ಪ್ರಿಯರೇ,
ನಮ್ಮ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಸಭೆಯು ಇದೇ ಬರುವ ದಿನಾಂಕ 21-06-2015 ನೇ ರವಿವಾರ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಕಾಸರಗೋಡು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನ ದಲ್ಲಿ ಜರಗಲಿದೆ. ಎಲ್ಲಾ ಕೇಂದ್ರ ಸಮಿತಿ ಸದಸ್ಯರು ಈ ಸಭೆಯಲ್ಲಿ ಹಾಜರಿದ್ದು ಸಂಘಟನೆಯ ಈ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳನ್ನು ರೂಪಿಸಲು ಸಲಹೆ ಸೂಚನೆಗಳನ್ನಿತ್ತು ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿನಂತಿ.
ಇತಿ,
ವಿಶ್ವಾಸಗಳೊಂದಿಗೆ
ಸ್ಥಳಃ ಕಾಸರಗೋಡು ಸುಬ್ರಹ್ಮಣ್ಯ ಭಟ್ ಕೆ
ದಿನಾಂಕಃ 17-06-2015 ಪ್ರಧಾನ ಕಾರ್ಯದರ್ಶಿ ಕೇ.ಪ್ರಾ..ಮಾ.. ಸಂಘ, ಕಾಸರಗೋಡು.
ಅಜಂಡಾ.
1.ಪುನರವಲೋಕನ.
2.ಅಧ್ಯಾಪಕ ಭವನ – ನಿರ್ವಹಣೆ.
3.ಉಪಜಿಲ್ಲೆಗಳ ಮಹಾಸಭೆ.
4.ಅಧ್ಯಾಪಕ ಧ್ವನಿ.
5.ಸದಸ್ಯತನ ಅಭಿಯಾನ.
6.ಇತರ.
(ಸೂಚನೆಃ ಕೇಂದ್ರ ಸಮಿತಿ ಸಭೆ ನಿಗದಿತ ಕ್ಲಪ್ತ ಸಮಯಕ್ಕೆ ಆರಂಭವಾಗಿ 12.00 ಗಂಟೆಗೆ ಮುಕ್ತಾಯವಾಗುವುದು.)



ಕವಿ ಕಯ್ಯಾರಗೊಂದಿಗೆ ಮಕ್ಕಳ ಸಾಹಿತ್ಯ ಸಂಗಮ.
ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಕೇಂದ್ರ ಸಮಿತಿಯ ವತಿಯಿಂದ ಶತಪೂರ್ತಿ ವರ್ಷಾಚರಣೆದಲ್ಲಿರುವ ಹಿರಿಯ ಕವಿ ನಾಡೋಜ ಡಾ/ ಕಯ್ಯಾರರಿಗೆ ಅಭಿನಂದನೆಗೈಯಲಾಯಿತು."ನಾನು ನೂರು ವರ್ಷ ಬದುಕಿ ಕನ್ನಡದ ಸೇವೆ ಮಾಡುತ್ತೇನೆ'. ಎ೦ದು ಮಂಗಳೂರಿನಲ್ಲಿ ಹಲವು ವರ್ಷಗಳ ಹಿಂದೆ ನಡೆದ ಮಕ್ಕಳ ಧ್ವನಿಯಲ್ಲಿ ನುಡಿದುದನ್ನು ನೀವು ಇಂದು ನಿಜಗೊಳಿಸಿದ್ದೀರಿ. ""ಈ ಸಲದ ಮಕ್ಕಳ ಧ್ವನಿ ಕಾರ್ಯಕ್ರಮವು ಕಾಸರಗೋಡಿನಲ್ಲಿನಡೆಯುತ್ತಿರುವುದು ನಿಮ್ಮ ಊರಲ್ಲಿ ಎ೦ಬುದು ನಮಗೆ ಹೆಮ್ಮೆಯ ವಿಷಯ ನಿಮ್ಮ ಆಶೀರ್ವಾದ ಸದಾ ನಮಗಿರಲಿ'' ಎ೦ದು ಸಾವಿತ್ರಿ ಎಸ್.ರಾವ್ ನುಡಿದರು.ಅವರು ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ಕಯ್ಯಾರರಿಗೆ ಸನ್ಮಾನ ಮಾಡಿ ಮಾತನಾಡಿದರು. ಕಯ್ಯಾರರ ಪ್ರಸಿದ್ಧ ಕವನ "ಐಕ್ಯವೊಂದೇ ಮಂತ್ರ' ವನ್ನು ಹಾಡಿದರು. ಸಾಹಿತ್ಯ ಪರಿಷತ್ತು ಕಾಸರಗೋಡು ಘಟಕಾಧ್ಯಕ್ಷರಾದ ಎಸ್.ವಿ.ಭಟ್ ಮತ್ತು ಸಂಗಮದ ಪ್ರತಿನಿಧಿಗಳಾಗಿ ಕೇಂದ್ರಾಧ್ಯಕ್ಷರಾದ ಸುಬ್ರಹ್ಮಣ್ಯ ಭಟ್, ಕಾಸರಗೋಡು ಘಟಕಾಧ್ಯಕ್ಷೆ ವಾಣಿ ಪಿ.ಎಸ್, ವಿ.ಬಿ.ಕುಳಮರ್ವ, ಲಲಿತಾಲಕ್ಷ್ಮಿ ಕುಳಮರ್ವ. ಕಾಸರಗೋಡು ಘಟಕದ ಕಾರ್ಯದರ್ಶಿ ಬಾಲ ಮಧುರಕಾನನ, ಕೇಂದ್ರ ಸಮಿತಿ ಸದಸ್ಯರಾದ ವಿಶಾಲಾಕ್ಷಿ, ಅಶ್ವಿನಿ ಮತ್ತು ಆಶಾ ದಿಲೀಪ್, ಜ್ಯೋತ್ಸ್ನಾ ಕಡಂದೇಲು,ಶೈಲಜಾ ಬಿ ಮತ್ತು ವೀರೇಶ್ವರ ಭಟ್ ಉಪಸ್ಥಿತರಿದ್ದರು.


14-06-2015
ಮಕ್ಕಳ ಧ್ವನಿ ಸಂಘಟಕ ಸಮಿತಿ ಸಭೆ


14-06-2015
ಮಕ್ಕಳ ಧ್ವನಿ-ಸಿದ್ಧತೆಯ ಸಭೆ.
ನೀರ್ಚಾಲು, ಮಕ್ಕಳ ಸಾಹಿತ್ಯ ಸಂಗಮವು ಮಕ್ಕಳಿಗಾಗಿ ಅನೇಕ ಚಟುವಟಿಕೆಗಳನ್ನು ಮಾಡುತ್ತಾ ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ, ಎಳವೆಯಲ್ಲಿಯೇ ಸಾಹಿತ್ಯಾಭಿರುಚಿ ಉಂಟಾದರೆ ಅದು ಉತ್ತಮ ಹವ್ಯಾಸವಾಗಿ ಮುಂದುವರಿಯುತ್ತದೆ. ಇದರಿಂದ ಮಕ್ಕಳ ಓದುವ ಸಾಮಾರ್ಥ್ಯವು ವೃದ್ದಿಸುವುದಲ್ಲದೆ ತಾರ್ಕಿಕ ಚಿಂತನೆಯನ್ನು ಬೆಳಗುತ್ತದೆ. ಇದಲ್ಲದೆ ಮಕ್ಕಳು ಸೃಜನಶೀಲರಾಗಿ ಬೆಳೆಯಬೇಕಾದರೆ ಸಾಹಿತ್ಯಾಸಕ್ತಿ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಸಂಗಮವು ಮಕ್ಕಳ ಧ್ವನಿಯಂತಹ ಔಚಿತ್ಯಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷದ ವಿಚಾರ. ಈ ಸಲದ ಮಕ್ಕಳ ಧ್ವನಿಯ ಆತಿಥ್ಯವು ಕಾಸರಗೋಡು ಜಿಲ್ಲೆಗೆ ಸಿಕ್ಕಿರುವುದು ನಮ್ಮ ಸಾಹಿತ್ಯಾಭಿರುಚಿಗೆ ಸಂದ ಗೌರವ; ಇದನ್ನು ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸಬೇಕು. ನಮ್ಮ ಮುಂದಿನ ಸಾಹಿತ್ಯ ಸಾರಥಿಗಳನ್ನು ಸಿದ್ಧಗೊಳಿಸುವ ಕಿರು ಪ್ರಯತ್ನದಲ್ಲಿ ಭಾಗಿಯಾಗಬೇಕು, ಎ೦ದು ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕಾಧ್ಯಕ್ಷರಾದ ಎಸ್.ವಿ.ಭಟ್ ನುಡಿದರು. ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢ ಶಾಲೆಯಲ್ಲಿ ನಡೆಯಲಿರುವ ಮಕ್ಕಳ ಧ್ವನಿ ಕಾರ್ಯಕ್ರಮದ ಸಂಘಟಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮಕ್ಕಳ ಧ್ವನಿ ಸಿದ್ದತೆಯ ಸಂಘಟಕ ಸಭೆಯ ಅಧ್ಯಕ್ಷತೆಯನ್ನು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕರಾದ ಜಯದೇವ ಖಂಡಿಗೆ ವಹಿಸಿದ್ದರು. ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷರಾದ ಕೆ.ಎನ್.ಕೃಷ್ಣ ಭಟ್, ಜಾನಪದ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷರಾದ ಕೇಶವ ಪ್ರಸಾದ್ ನಾಣಿಹಿತ್ತಿಲು, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ, ಪ್ರೊ/ಅನಂತ ಪದ್ಮನಾಭ ರಾವ್, ಡಾ/ಹರಿಕೃಷ್ಣ ಭರಣ್ಯ, ಮಕ್ಕಳ ಸಾಹಿತ್ಯ ಸಂಗಮ ಕಾಸರಗೋಡು ಘಟಕದ ಅಧ್ಯಕ್ಷೆ ವಾಣಿ ಪಿ.ಎಸ್ ಮತ್ತು ಆತಿಥೇಯ ಶಾಲೆಯ ಮುಖ್ಯ ಶಿಕ್ಷಕರಾದ ಸಿ.ಎಚ್ ವೆಂಕಟರಾಜ ಉಪಸ್ಥಿತರಿದ್ದರು. ಕೇಂದ್ರ ಘಟಕದ ಪೂರ್ವಾಧ್ಯಕ್ಷರಾದ ವಿ.ಬಿ. ಕುಳಮರ್ವ ಪ್ರಾಸ್ತಾವಿಕ ನುಡಿದರು.ಕೇಂದ್ರಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೆ, ಸಾವಿತ್ರಿ ಎಸ್ ರಾವ್ ಮಕ್ಕಳ ಧ್ವನಿಯ ಆಶಯ ಚಿತ್ರಣ ಮೂಡಿಸಿದರು.ಕಾಸರಗೋಡು ಘಟಕದ ಕಾರ್ಯದರ್ಶಿ ಬಾಲ ಮಧುರಕಾನನ ಸ್ವಾಗತಿಸಿ, ಗೋವಿಂದ ಶರ್ಮ ಕೆ. ವಂದಿಸಿದರು. ಶೈಲಜಾ ಬಿ ಪ್ರಾರ್ಥನೆ ಮತ್ತು ಮಂಗಳ ಹಾಡಿದರು.ಕಾಸರಗೋಡಿನ ವಿವಿಧ ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳ ಶ್ರೇಯೋಭಿಲಾಷಿಗಳು ಸೇರಿದಂತೆ ಬಹು ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ರೂಪುರೇಷೆಯ ಚಿಂತನೆಯ ಬಳಿಕ ಸ್ವಾಗತ ಸಮಿತಿ ರೂಪಿಸಲಾಯಿತು. ಎಸ್.ವಿ.ಭಟ್ ಗೌರವಾಧ್ಯಕ್ಷರಾಗಿ, ಜಯದೇವ ಖಂಡಿಗೆ ಅಧ್ಯಕ್ಷರಾಗಿ, ಪ್ರಧಾನ ಸಂಚಾಲಕರಾಗಿ ಗೋವಿಂದ ಶರ್ಮ ಆಯ್ಕೆಯಾದರು. ಕಾರ್ಯಕ್ರಮದ ಯಶಸ್ವೀ ನಿರ್ವಹಣೆಗಾಗಿ ಉಪಸಮಿತಿ ಮತ್ತು ಸಲಹಾ ಸಮಿತಿಗಳನ್ನು ರಚಿಸಲಾಯಿತು.