FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Saturday 12 March 2022

ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಭೆ

          ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯು ಇಂದು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನದಲ್ಲಿ ನಡೆಯಿತು.

         ಸಭೆಯ ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಶ್ರೀನಿವಾಸ ರಾವ್ ಪಿ. ಬಿ ವಹಿಸಿದ್ದರು. ಕೇಂದ್ರ ಸಮಿತಿಯ ಉಪಾಧ್ಯಕ್ಷೆ ಪ್ರಭಾವತಿ ಕೆದಿಲಾಯ, ಕೋಶಾಧಿಕಾರಿ ಪದ್ಮಾವತಿ ಎಂ, ಸದಸ್ಯರಾದ ಯಶೋಧಾ ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಮಂಜೇಶ್ವರ ಉಪಜಿಲ್ಲಾ ಸಮಿತಿಯ ಕಾರ್ಯದರ್ಶಿ ಶ್ರೀರಾಮ ಕೆದುಕೋಡಿ ವಂದಿಸಿದರು. ಕೇಂದ್ರ ಸಮಿತಿಯ ಪದಾಧಿಕಾರಿಗಳು ಹಾಜರಿದ್ದು, ಚರ್ಚೆಯಲ್ಲಿ ಪಾಲ್ಗೊಂಡರು.




ಶಿಕ್ಷಣ ಇಲಾಖೆಯ ಪರೀಕ್ಷಾ (Department Test) ತಯಾರಿಗೆ ತರಬೇತಿ

           ಕನ್ನಡ ಮಾಧ್ಯಮ ಶಾಲೆಗಳ ಅಧ್ಯಾಪಕರು ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಲು ಬೇಕಾದ ಶಿಕ್ಷಣ ಇಲಾಖೆಯ ಪರೀಕ್ಷೆಗೆ ಸಂಬಂಧಿಸಿ ಇಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ವತಿಯಿಂದ ಪರೀಕ್ಷಾ ತಯಾರಿಗೆ ನಡೆಸುವ ತರಬೇತಿಯ ಉದ್ಘಾಟನೆಯು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನದಲ್ಲಿ ನಡೆಯಿತು. 

           ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿ ನಾಡ ಘಟಕದ ಅಧ್ಯಕ್ಷರಾದ ಶ್ರೀ ಎಸ್.ವಿ ಭಟ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ. ಬಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಅಧಿಕೃತ ವಕ್ತಾರರಾದ ಶ್ರೀ ರವೀಂದ್ರನಾಥ್ ಕೆ ಆರ್, ಮಂಜೇಶ್ವರ ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ಉಮೇಶ್ ಕೆ, ಕಾಸರಗೋಡು ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ವಿನೋದ್ ರಾಜ್ ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸುಕೇಶ್ ಎ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಕಾಸರಗೋಡು ಉಪಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಬು ಕೆ ವಂದಿಸಿದರು.

           ಬಳಿಕ ಸಂಪನ್ಮೂಲ ವ್ಯಕ್ತಿ ಶ್ರೀ ಶ್ರೀನಿವಾಸ್ ರಾವ್ ಪಿ. ಬಿ ತರಬೇತಿ ನಡೆಸಿಕೊಟ್ಟರು. ಮಂಜೇಶ್ವರ ಉಪಜಿಲ್ಲಾ ಸಮಿತಿಯ ಕೋಶಾಧಿಕಾರಿ ಜೀವನ್ ಕುಮಾರ್ ಸಹಕರಿಸಿದರು. ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಮಾಧ್ಯಮ ಶಿಕ್ಷಕ - ಶಿಕ್ಷಕಿಯರು ಈ ತರಬೇತಿಯ ಸದುಪಯೋಗವನ್ನು ಪಡೆದರು. ಮುಂದಿನ ದಿನಗಳಲ್ಲಿ ಈ ತರಬೇತಿಯನ್ನು ಮುಂದುವರಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ.








Friday 11 March 2022

ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನಿಯೋಗವು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ

         ಕಾಸರಗೋಡು ಭಾಷಾ ಅಲ್ಪಸಂಖ್ಯಾತರ ಪ್ರದೇಶವಾಗಿದ್ದು ಇಲ್ಲಿನ ಕನ್ನಡಿಗರುಇದರ ಸಾಂವಿಧಾನಿಕ ಹಕ್ಕನ್ನು ಪಡೆದವರಾಗಿರುವರು. ಆದರೂ ಇಲ್ಲಿನ ಕನ್ನಡಿಗರು ತಮ್ಮ ಹಕ್ಕುಗಳ ಸಂರಕ್ಷಣೆಗೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಈಗಲೂ ಒಂದಿಲ್ಲೊಂದು ಸಮಸ್ಯೆಗಳು ಉದ್ಭವಿಸುತ್ತಲೇ ಇವೆ. ಕಾಸರಗೋಡಿನ ಕನ್ನಡಿಗರ ಸಂಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿರುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ನಿರಂತರವಾಗಿ ಸಹಕಾರವನ್ನು ಕೊಟ್ಟಿರುತ್ತದೆ.

          ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳ, ಅಧ್ಯಾಪಕರು ಹಾಗೂ ಮಕ್ಕಳ ಹೋರಾಟದ ಬದುಕಿಗೆ ಸದಾ ಸ್ಪಂದಿಸುತ್ತಿರುವ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನಿಯೋಗವು ಇಂದು ಕಾಸರಗೋಡು ಜಿಲ್ಲೆಗೆ ಆಗಮಿಸಿದ ಕರ್ನಾಟಕ ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸಿ ಸೋಮಶೇಖರರವರನ್ನು ಭೇಟಿಯಾಗಿ ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳ ಕುರಿತಾದ ಸಮಸ್ಯೆಗಳಿಗೆ ಸ್ಪಂದಿಸಲು ಮನವಿ ಸಲ್ಲಿಸಲಾಯಿತು. ಸಂಘಟನೆಯ ಅವಹಾಲನ್ನು ಸ್ವೀಕರಿಸಿದ ಮಾನ್ಯ ಸಿ ಸೋಮಶೇಖರರವರು ಧನಾತ್ಮಕವಾಗಿ ಸ್ಪಂದಿಸಿ, ಸೂಕ್ತ ಕ್ರಮಗಳ ಭರವಸೆಯನ್ನು ನೀಡಿರುತ್ತಾರೆ. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪರವಾಗಿ ಕೇಂದ್ರ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಪ್ರಭಾವತಿ ಕೆದಿಲಾಯ, ಉಪ ಕೋಶಾಧಿಕಾರಿ ಶರತ್ ಕುಮಾರ್, ಕುಂಬಳೆ ಉಪಜಿಲ್ಲಾ ಸಮಿತಿಯ ಕಾರ್ಯದರ್ಶಿ ಶ್ರೀಶ ಪಂಜಿತ್ತಡ್ಕ, ಕಾಸರಗೋಡು ಉಪಜಿಲ್ಲಾ ಸಮಿತಿಯ ಉಪಾಧ್ಯಕ್ಷ ಹರೀಶ ಎನ್, ಕೋಶಾಧಿಕಾರಿ ವೆಂಕಟಕೃಷ್ಣ ಕೆ ಉಪಸ್ಥಿತರಿದ್ದರು.




Monday 7 March 2022

ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡೇತರ ಅಧ್ಯಾಪಕರ ನೇಮಕ : ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ತೀವ್ರ ಖಂಡನೆ

          ಭಾಷಾ ಅಲ್ಪ ಸಂಖ್ಯಾತರ ಪ್ರದೇಶವಾದ ಕಾಸರಗೋಡಿನಲ್ಲಿ ಸಾಂವಿಧಾನಿಕವಾಗಿ ಭಾಷಾ ಅಲ್ಪ ಸಂಖ್ಯಾತರ ಹಕ್ಕನ್ನು ಹೊಂದಿದ್ದರೂ ಕನ್ನಡಿಗರು ಅನುಭವಿಸುವ ಕಷ್ಟ ಇಂದು ನಿನ್ನೆಯದಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡೇತರ ಅಧ್ಯಾಪಕರ ನೇಮಕ ಈ ಹಿಂದೆ ಅನೇಕ ಬಾರಿ ನಡೆದು, ತೀವ್ರ ಪ್ರತಿರೋಧ ಎದುರಿಸಿದರೂ ಇದೀಗ ಮತ್ತೆ ಕನ್ನಡೇತರ ಅಧ್ಯಾಪಕರ ನೇಮಕವನ್ನು ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

          ಅಂಗಡಿಮೊಗರು ಸರಕಾರಿ ಪ್ರೌಢ ಶಾಲೆಯ ಕನ್ನಡ ವಿಭಾಗಕ್ಕೆ ಕನ್ನಡೇತರ ಅಧ್ಯಾಪಕರ ನೇಮಕದ ಆದೇಶ ಆಗಿದ್ದು, ಈ ಬಗ್ಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನಿಯೋಗವು ಶಾಲೆಗೆ ಭೇಟಿ ನೀಡಿ, ಈ ನೇಮಕಾತಿಯ ವಿರುದ್ಧ ತೀವ್ರವಾಗಿ ಖಂಡನೆಯನ್ನು ವ್ಯಕ್ತಪಡಿಸಿತು. ಈ ಹಿಂದೆ ಆದ ಇಂತಹ ನೇಮಕಾತಿಗಳ ಬಗ್ಗೆ ಹಲವು ಬಾರಿ ಮೇಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಮತ್ತೆ ಇಂತಹ ನೇಮಕಾತಿಯನ್ನು ಮಾಡುವ ಮೂಲಕ ಕನ್ನಡಿಗರ ಸಾಂವಿಧಾನಿಕ ಹಕ್ಕನ್ನು ಮತ್ತೊಮ್ಮೆ ಕಸಿದುಕೊಂಡಂತಾಗಿದೆ, ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಕನ್ನಡ ಮಕ್ಕಳ ಭವಿಷ್ಯವನ್ನು ಕಾಪಾಡಬೇಕೆಂದು ಆಗ್ರಹಿಸಿದೆ. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಪಿ. ಬಿ, ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಪದ್ಮಾವತಿ ಎಂ, ಕುಂಬಳೆ ಉಪಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶಿವಕುಮಾರ್ ಎಸ್, ಕೋಶಾಧಿಕಾರಿ ಶರತ್ ಕುಮಾರ್, ಸದಸ್ಯರಾದ ನಯನ ಪ್ರಸಾದ್ ಎಚ್. ಟಿ, ಗುರುರಾಜ್ ಮೊದಲಾದವರು ಒಳಗೊಂಡ ನಿಯೋಗವು ಶಾಲೆಗೆ ಭೇಟಿ ನೀಡಿ, ನೇಮಕಾತಿಯನ್ನು ತಡೆ ಹಿಡಿಯಲು ಸಂಪೂರ್ಣ ಸಹಕಾರದ ಭರವಸೆಯನ್ನು ನೀಡಿದೆ.