FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Friday 3 July 2015


3-07-2015
ಹೊಸದುರ್ಗ ಶಾಲೆಯ ಕನ್ನಡ ಶಿಕ್ಷಕ ಹುದ್ದೆಯನ್ನು ರದ್ದುಗೊಳಿಸಿದ ಜಿಲ್ಲಾ ಶಿಕ್ಷಣಾಧಿಕಾರಿಯ ವಿರುದ್ಧ ಶಿಸ್ತಿನ ಕ್ರಮಕ್ಕೆ ಆಗ್ರಹ.
ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆದಂತಹ ಶಿಕ್ಷಕ ಹುದ್ದೆ ನಿರ್ಣಯದ ಪ್ರಕಾರ ಯು.ಪಿ.ವಿಭಾಗದ ಶಿಕ್ಷಕ ಹುದ್ದೆಯನ್ನು ವಿನಾಕಾರಣ ರದ್ದುಗೊಳಿಸಿದ ಹೊಸ ದುರ್ಗ ಜಿಲ್ಲಾ ಶಿಕ್ಷಣಾಧಿಕಾರಿಗಳ ಬೇಜವಾಬ್ದಾರಿ ನಿಲುವನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ತರಾಟೆಗೆ ತೆಗೆದುಕೊಂಡಿದೆ. ಹೊಸದುರ್ಗ ತಾಲೂಕಿನ ಏಕೈಕ ಕನ್ನಡ ಮಾಧ್ಯಮ ಸರಕಾರಿ ಶಾಲೆಯಲ್ಲಿ ನೆಲೆನಿಂತಿರುವ ಕನ್ನಡ ವಿಭಾಗವನ್ನು ತೆರವುಗೊಳಿಸುವ ದುಸ್ಸಾಹಸಕ್ಕೆ ಅವಕಾಶ ನೀಡಲಾರೆವು ಎ೦ದು ಸ್ಪಷ್ಟ ಸಂದೇಶವನ್ನು ಜಿಲ್ಲಾ ಅಧಿಕೃತರಿಗೆ ಮನವರಿಕೆ ಮಾಡಲಾಯಿತು. ವಿಶೇಷ ಆದೇಶ 4953/ 2000 ದಿನಾಂಕ 2/12/2000 ತಿರುವನಂತಪುರ ಇದರ ಅನ್ವಯ ಹದಿಮೂರು ವರ್ಷಗಳ ಕಾಲ ಇದ್ದ ಹುದ್ದೆಯು ಏಕಾಕಏಕಿ ಇಲ್ಲದಾಗಿಸುವ ಅಧಿಕೃತರ ನಿಲುವು ದ್ವೇಶಪೂರಿತವೂ ಅನಾರೋಗ್ಯಕರವೂ ಆಗಿದೆಯೆಂದು ಸಂಘಟನೆ ಆಕ್ಷೇಪಿಸಿದೆ. ತೆರವುಗೊಳಿಸಿದ ಶಿಕ್ಷಕ ಹುದ್ದೆಯನ್ನು ಪುನಃಸ್ಥಾಪಿಸಿ ಸರಕಾರಿ ಆದೇಶವನ್ನು ಪಾಲಿಸುವ ಸಾಮಾನ್ಯ ಮರ್ಯಾದೆಯನ್ನು ಜಿಲ್ಲಾ ಶಿಕ್ಷಣಾಧಿಕಾರಿಯವರು ನೆರವೇರಿಸಬೇಕು, ಕನ್ನಡ ಕಲಿಯುವ ಮಕ್ಕಳ ಹಕ್ಕಿಗೆ ಚ್ಯುತಿತರುವ ಹುನ್ನಾರದಿಂದ ಹಿಂದೆ ಸರಿಯಬೇಕು,ಇಲ್ಲವಾದರೆ ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ಕಸಿಯುವ ಅಧಿಕಾರಿಗಳ ಚಾಳಿಗೆ ದುಬಾರಿ ಬೆಲೆ ತೆರಬೇಕಾದೀತು ಎ೦ದು ಸಂಘಟನೆ ಕಟುವಾಗಿ ಎಚ್ಚರಿಸಿದೆ. ಕಾಸರಗೋಡಿನ ಸಮಸ್ತ ಕನ್ನಡ ಸಂಘಟನೆಗಳು ಈ ಹೋರಾಟದಲ್ಲಿ ಭಾಗವಹಿಸಿ ಕನ್ನಡ ದಮನ ನೀತಿಯನ್ನು ಕೊನೆಗೊಳಿಸಬೇಕೆಂದು ಕರೆ ನೀಡಲಾಗಿದೆ.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರಾಧ್ಯಕ್ಷರಾದ ಟಿ.ಡಿ.ಸದಾಶಿವ ರಾವ್, ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ., ಪ್ರಧಾನಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ, ಬೇಕಲ ಹೊಸದುರ್ಗ ಘಟಕಾಧ್ಯಕ್ಷರಾದ ಪುಷ್ಪಾವತಿ ಎ೦., ರಜನಿಕುಮಾರಿ, ಅಮಿತಾ ಎಚ್ ಮತ್ತು ಪ್ರದೀಪ್ ಕುಮಾರ್ ಶೆಟ್ಟಿ ಕೆ, ನಿಯೋಗದಲ್ಲಿ ಪಾಲ್ಗೊಂಡರು. ಜಿಲ್ಲಾ ಶಿಕ್ಷಣಾಧಿಕಾರಿ ಕಛೇರಿಯ ಅಧಿಕೃತರು ಮತ್ತು ಜಿ.ಎಚ್.ಎಸ್.ಎಸ್. ಹೊಸದುರ್ಗ ಹೈಸ್ಕೂಲಿನ ಮುಖ್ಯಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಲಾಯಿತು.


No comments:

Post a Comment