FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Monday 1 December 2014

-->
1-12-2014
ಕಾಸರಗೋಡಿನಲ್ಲಿ ಕನ್ನಡಕ್ಕೆ ಕನ್ನ ಹಾಕುವ ಹುನ್ನಾರ ಸಲ್ಲದು. ಕನ್ನಡ ಅಧ್ಯಾಪಕ ಸಂಘ.
ಕನ್ನಡ ಶಾಲೆಗಳಲ್ಲಿ ಅದೆಷ್ಟೋ ಹುದ್ದೆಗಳು ಬಾಕಿ ಇದ್ದು ಅವುಗಳನ್ನು ಭರ್ತಿಗೊಳಿಸಲು ಕನ್ನಡ ಭಾಷೆ ತಿಳಿಯದ ಅಭ್ಯರ್ತಿಗಳು ಸಾಲಾಗಿ ನಿಂತಿದ್ದು ಇವರನ್ನು ಅಡ್ಡ ದಾರಿಯಲ್ಲಿ ಕನ್ನಡ ಅಧ್ಯಾಪಕ ಹುದ್ದೆಗೆ ಬರಲು ಅವಕಾಶ ನೀಡಬಾರದು.
ಕನ್ನಡ ಮಾಧ್ಯಮದಲ್ಲಿ ಪಾಠ ಮಾಡಲು ಶಿಕ್ಷರನ್ನು ನೇಮಿಸುವಾಗ ಅಭ್ಯರ್ಥಿಗಳಿಗೆ ಕನ್ನಡ ಮಾಧ್ಯಮದ ಪಠ್ಯಪುಸ್ತಕ ನೀಡಿ ಕನಿಷ್ಟ ಮೂರು ಗಂಟೆಯಾದರು ಮೌಖಿಕ ಪರೀಕ್ಷೆ ನಡೆಸಬೇಕು. ಒಂದರಿಂದ ಹತ್ತನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಅಭ್ಯರ್ಥಿಗಳು ಮಾತ್ರವೇ ಇಂತಹ ಹುದ್ದೆಗೆ ಅರ್ಹರೆಂಬ ವಾದವನ್ನು ಈ ಹಿಂದೆ ಕನ್ನಡ ಸಂಘಟನೆಗಳು ನೀಡಿವೆ.ಇವು ಇನ್ನೂ ಸರಕಾರದ ಪರಿಗಣನೆಯಲ್ಲಿವೆ. ಈ ಸ್ಥಿತಿಯಲ್ಲಿ ಇನ್ನೊಂದು ಪ್ರಹಾರವನ್ನು ಎದುರಿಸಲು ಖಂಡಿತಾ ಕನ್ನಡಿಗರು ಸಿದ್ದರಿಲ್ಲ.
ಹೊಸ ದುರ್ಗದ ಯು.ಪಿ.ವಿಭಾಗದ ಶಿಕ್ಷಕ ಹುದ್ದೆ ಮಂಗ ಮಾಯ
ಜಿ.ಎಚ್.ಎಸ್.ಹೊಸದುರ್ಗದಲ್ಲಿ ಸರಕಾರದ ವಿಶೇಷ ಆದೇಶದಂತೆ ಯು.ಪಿ.ವಿಭಾಗದ ಶಿಕ್ಷಕ ಹುದ್ದೆನ್ನು ಉಳಿಸಿಕೊಳ್ಳಲಾಗಿತ್ತು, ಇದನ್ನು ಇದ್ದಕ್ಕಿದ್ದಂತೆಯೇ ಇಲ್ಲದಾಗಿಸಿದ ಹೊಸದುರ್ಗ ಜಿಲ್ಲಾಶಿಕ್ಷಣಾಧಿಕಾರಿಯ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದೂ ಶಿಕ್ಷಕ ಹುದ್ದೆಯನ್ನು ಪುನ ಸ್ಥಾಪಿಸಬೇಕೆಂದೂ ಸಂಘಟನೆ ಒತ್ತಾಯಿಸಿದೆ. ಜಿಲ್ಲೆಯಲ್ಲಿ ಹೊಸದಾಗಿ ಸೇರಿದ ಎಲ್ಲಾ ಅಧ್ಯಾಪಕ ಹುದ್ದೆಗಳನ್ನು ಕೂಡಲೆ ಅಂಗೀಕರಿಸಬೇಕೆಂದೂ ಇದಕ್ಕೆ ಅಡ್ಡಿಯಾದ ಎಲ್ಲಾ ತಡೆಯನ್ನೂ ಸರಕಾರ ನಿಯಮಾನುಸಾರ ತೊಡೆದುಹಾಕಿದೆ ಎ೦ದು ಅಧಿಕೃತರು ತಿಳಿಸಿದ್ದಾರೆ.
ಅಂಗನವಾಡಿಗಳಲ್ಲಿ ಕನ್ನಡಕ್ಕೆ ಕುತ್ತು.
ಶಿಶು ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸಲ್ಪಡುವ ಅಂಗನವಾಡಿಗಳಲ್ಲಿ ಕನ್ನಡ ಬೋಧಿಸಲು ಸಿಲಬಸ್ ಲಭ್ಯವಿಲ್ಲ. ಕೇವಲ ಮಲಯಾಳದಲ್ಲಿ ತಯಾರಾದ ಸಿಲಬಸ್ ನ್ನು ಕನ್ನಡ ಶಿಕ್ಷಕಿಯರಿಗೆ ನೀಡಿ ವಂಚಿಸಲಾಗುತ್ತಿದೆ. ಇಲ್ಲಿ ಸಂವಿಧಾನ ಬದ್ದವಾಗಿ ಕನ್ನಡ ಕಲಿಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ.ಅದಕ್ಕೆ ಮೂಲಭೂತ ಸೌಕರ್ಯವನ್ನು ಒದಗಿಸುವ ಜವಾಬ್ದಾರಿ ಸರಕಾರಕ್ಕಿದೆ. ಇದನ್ನು ತಿಳಿಯದ ಅಧಿಕಾರಿಗಳಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನ ತಳಮಟ್ಟದಿಂದಲೇ ಆಗಬೇಕಾಗಿದೆ. ಮಲಯಾಳದಲ್ಲಿ ತಯಾರಾದ ಸಿಲೆಬಸ್ ಪುಸ್ತಕಕ್ಕೆ ಸಮಾನಾಂತರವಾಗಿ ಕನ್ನಡದಲ್ಲಿಯೂ ತಯಾರಿಸಿ ಕಾಸರಗೋಡಿನಲ್ಲಿರುವ ಎಲ್ಲಾ ಅಂಗನವಾಡಿಗಳಿಗೂ ವಿತರಿಸಬೇಕೆಂದು ಸಂಘಟನೆ ಅಧಿಕೃತರನ್ನು ಒತ್ತಾಯಿಸಿದೆ.
ಸರಕಾರದಿಂದ ವಿತರಿಸಲಾಗುವ ರಶೀದಿ, ಅರ್ಜಿ ಫೋರ್ಮ್ ಮಲಯಾಳಮಯ.
ಕಾಸರಗೋಡಿನ ಹಿಂದುಳಿಯುವಿಕೆಗೆ ಕಾರಣವಾದ ಅನೇಕ ವಿಷಯಗಳಲ್ಲಿ ಇದೂ ಒಂದು. ಕನ್ನಡಿಗರಿಗೆ ಭಾಷೆ ತಿಳಿಯದ ಫೋರ್ಮ್ ವಿತರಿಸುವ ಪ್ರಕ್ರಿಯೆ ಇನ್ನೂ ಮುಂದುವರಿಸಿದ್ದಾದಲ್ಲಿ ಅವುಗಳನ್ನು ಬರೆಯಿಸುವ ಶುಲ್ಕವನ್ನು ಸಂಬಂಧಪಟ್ಟ ಇಲಾಖಾ ವತಿಯಿಂದ ಒದಗಿಸಬೇಕೆಂದು ನ್ಯಾಯಾಲಯದ ಮೊರೆಹೋಗಬೇಕೆಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ನಮ್ಮ ಸವಲತ್ತನ್ನು ಕಸಿದುಗೊಳ್ಳುವ ಯಾವುದೇ ಷಡ್ಯಂತ್ರಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ಎಲ್ಲ ಕನ್ನಡಿಗರೂ ಒಟ್ಟಾಗಬೇಕೆಂದು ಸಂಘಟನೆ ಕರೆ ನೀಡಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಇದರ ಪ್ರಯುಕ್ತ
ಸಂಘಟನೆಯ ಕೇಂದ್ರ ಸಭೆಯು ಟಿ.ಡಿ.ಸದಾಶಿವ ರಾವ್ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಅಧ್ಯಾಪಕಭವನದಲ್ಲಿ ಜರಗಿತು. ಕೆ.ವಿ.ಸತ್ಯನಾರಾಯಣ ರಾವ್, ಪ್ರಭಾವತಿ ಕೆದಿಲ್ಲಾಯ ಪಿ, ಅಬ್ದುಲ್ ರಹಿಮಾನ್ ಎ, ಬಾಬು ಕೆ, ಅಮಿತಾ ಎಚ್, ಕೃಷ್ಣೋಜಿ ರಾವ್ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ಇತ್ತೀಚೆಗೆ ಅಡ್ಕತ್ತಬೈಲು ಮತ್ತು ಮುನ್ಸಿಪಲ್ ಸ್ಟೇಡಿಯಂನಲ್ಲಿ ಜರಗಿದ ರಾಜ್ಯ ಮಟ್ಟದ ಕ್ರೀಡಾ ಕೂಟದ ನಿರ್ವಹಣೆಗಾಗಿ ನಿಯೋಜಿಸಲ್ಪಟ್ಟ ವೆಲ್ಫೇರ್ ಸಮಿತಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯರನ್ನೂ ಅಭಿನಂದಿಸಲಾಯಿತು.ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ, ಪದ್ಮಾವತಿ ಎ೦ ವಂದಿಸಿದರು.

No comments:

Post a Comment